Sunday, February 26, 2012

’ಸಿದ್ಧಮೂಲೆ’ಯವರಿಗೆ ’ಮುದ್ದಣ ಪುರಸ್ಕಾರ’ ಪ್ರದಾನ


"ಶಬ್ದಕೋಶ ತಯಾರಿಯಲ್ಲಿ ಕೋಶರಚನಾಕಾರನ ಶ್ರಮ ಎಲ್ಲೂ ದಾಖಲಾಗುವುದಿಲ್ಲ. ಆತ ಅವಜ್ಞೆಗೆ ಒಳಗಾಗಿದ್ದಾನೆ. ಶಬ್ದವೊಂದರ ಎಲ್ಲಾ ಮಗ್ಗುಲುಗಳನ್ನು ಅಧ್ಯಯನ ಮಾಡಿ, ಅದರ ಸಾರಸಂಗ್ರಹವನ್ನು ಸಿದ್ಧಪಡಿಸಲು ಕಾಲದ ಪರಿವೆಯಿಲ್ಲದೆ ದುಡಿಯಬೇಕಾಗುತ್ತದೆ. ಆದರೆ ಬದಲಾದ ಶಿಕ್ಷಣ ವ್ಯವಸ್ಥೆಯಲ್ಲಿ ಭಾಷೆ, ಶಬ್ಧಗಳ ಅನಾದರ ಎದ್ದುಕಾಣುತ್ತಿರುವುದು ವಿಷಾದನೀಯ" ಎಂದು ಹಿರಿಯ ವಿದ್ವಾಂಸ ಡಾ.ಪಾದೆಕಲ್ಲು ವಿಷ್ಣು ಭಟ್ ಹೇಳಿದರು.

ಅವರು ರವಿವಾರ (26-2-2012) ಬಹುಭಾಷಾ ಪಂಡಿತ, ಸೇವಾತತ್ಪರ, ಅನುವಾದಕ ಶ್ರೀ ಸಿದ್ಧಮೂಲೆ ಶಂಕರನಾರಾಯಣ ಭಟ್ಟರಿಗೆ, ಮಂಗಳೂರಿನ 'ಮುದ್ದಣ ಪ್ರಕಾಶನ ಮುದ್ದಣ ಚಾವಡಿ'ಯ ಈ ವರುಷದ 'ಪುದ್ದಣ ಪುರಸ್ಕಾರ' ನೀಡಿ ಗೌರವಿಸುತ್ತಾ, ಸಿದ್ಧಮೂಲೆಯವರ ಸಿದ್ದಿ, ಸಾಧನೆಗಳನ್ನು ವಿವರಿಸಿ, 'ಹಳ್ಳಿಮೂಲೆಯಲ್ಲಿ ಸದ್ದಿಲ್ಲದೆ ಸಾರಸ್ವತ ಲೋಕಕ್ಕೆ ಗಣನೀಯ ಪ್ರಮಾಣದಲ್ಲಿ ವಾಙ್ಮಯ ಕೊಡುಗೆ ನೀಡಿದ ಸಿದ್ದಮೂಲೆಯವರಿಗೆ ಕನ್ನಾಡಿನಲ್ಲಿ ಸಿಗಬೇಕಾದ ಮಾನ್ಯತೆ ಸಿಗಲಿಲ್ಲ' ಎಂದು ವಿಷಾದಿಸಿದರು.

ಡಾ.ಪಾದೆಕಲ್ಲು ವಿಷ್ಣು ಭಟ್ಟರು ಶಾಲು, ಫಲತಾಂಬೂಲ, ಪುರಸ್ಕಾರ ಫಲಕ ಮತ್ತು ನಿಧಿಯೊಂದಿಗೆ ಭಟ್ಟರನ್ನು ಗೌರವಿಸಿದರು. 'ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ, ಸಾಮಾಜಿಕ ಋಣವನ್ನು ತೀರಿಸುವ ಉದ್ದೇಶದಿಂದ ಬೇರೆ ಬೇರೆ ಕ್ಷೇತ್ರದಲ್ಲಿ ಒಂದಷ್ಟು ಕೆಲಸಗಳನ್ನು ಮಾಡಿದ ಸಂತೃಪ್ತಿ ನನಗಿದೆ' ಎಂದರು ಸಿದ್ಧಮೂಲೆ ಶಂಕರನಾರಾಯಣ ಭಟ್.

ಪುತ್ತೂರು ಸನಿಹದ ಪೆರ್ಲಂಪಾಡಿಯ ಸಿದ್ಧಮೂಲೆಯವರ ಸ್ವಗೃಹದಲ್ಲಿ ಜರುಗಿದ ಸರಳ ಸಮಾರಂಭದಲ್ಲಿ ಪುತ್ತೂರು ವಿವೇಕಾನಂದ ಕಾಲೇಜಿನ ಆಡಳಿತಾಧಿಕಾರಿ ಶ್ರೀ ಕೆ.ವಿ.ನಾರಾಯಣ ಅವರು ಸಿದ್ಧಮೂಲೆಯವರ ಒಡನಾಟವನ್ನು ಜ್ಞಾಪಿಸಿಕೊಳ್ಳುತ್ತಾ ಅಭಿನಂದಿಸಿದರು.

ಮಂಗಳೂರಿನ ಮುದ್ದಣ ಪ್ರಕಾಶನದ ಗೌರವ ನಿರ್ದೇಶಕ, ಪ್ರಕಾಶಕ ಶ್ರೀ ನಂದಳಿಕೆ ಬಾಲಚಂದ್ರ ರಾವ್ ಕಾರ್ಯಕ್ರಮವನ್ನು ನಿರ್ವಹಿಸಿ, ಸ್ವಾಗತಿಸಿದರು. ಪತ್ರಕರ್ತ, ವಿಮರ್ಶಕ ನಾ. ಕಾರಂತ ಪೆರಾಜೆ ವಂದಿಸಿದರು. ಸಮಾರಂಭದಲ್ಲಿ ಸಿದ್ಧಮೂಲೆಯವರ ಎಲ್ಲಾ ಬಂಧುಗಳು ಉಪಸ್ಥಿತರಿದ್ದರು.

No comments:

Post a Comment