Monday, February 6, 2012

ಪಠ್ಯಕ್ಕೆ ಸೇರ್ಪಡೆಗೊಂಡ 'ಹಾಜಬ್ಬ ಲೇಖನ'

ನಾ. ಕಾರಂತ ಪೆರಾಜೆಯವರು ಅಕ್ಷರಯೋಗಿ ಹಾಜಬ್ಬರ ಕುರಿತು ಪ್ರಜಾವಾಣಿಯಲ್ಲಿ ಬರೆದ ಬರೆಹವು ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯ ಹಾಗೂ ದಾವಣಗೆರೆ ವಿಶ್ವವಿದ್ಯಾಲಯಗಳ ವಾಣಿಜ್ಯ ವಿಭಾಗದ ನಾಲ್ಕನೇ ಸೆಮಿಸ್ಟರ್ನ ಕನ್ನಡ ಪಠ್ಯದಲ್ಲಿ ಸೇರ್ಪಡೆಗೊಂಡಿದೆ. ಈ ಶೈಕ್ಷಣಿಕ ವರ್ಷದಿಂದಲೇ ಹಾಜಬ್ಬರ ಸಾಧನೆ ಕುರಿತ ಕನ್ನಡ ಪಠ್ಯ 'ಸಾಹಿತ್ಯ ಸ್ಪಂದನ ಭಾಗ-2 ರಚನೆಗೊಂಡಿದೆ.

ಹಾಜಬ್ಬ ಕಿತ್ತಳೆ ವ್ಯಾಪಾರಿ. ಹರೇಕಳದ ನ್ಯೂಪಡ್ಪು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ಪ್ರೌಢ ಶಾಲೆಯ ಮಟ್ಟಕ್ಕೆ ಕೊಂಡಯ್ದ ಸಾಹಸಿ. ದಾನಿಗಳ ನೆರವಿನಿಂದ ಹಳ್ಳಿಯಲ್ಲಿ ಅಕ್ಷರಕ್ರಾಂತಿಯನ್ನು ಮಾಡಿದ ಯೋಗಿ ಹಾಜಬ್ಬರು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದಾರೆ. ಕನ್ನಾಡಿನ ಎಲ್ಲಾ ಪತ್ರಿಕೆಗಳು ಅವರ ಸಾಧನೆಗೆ ಬೆಳಕು ಹಾಕಿವೆ. ಅನೇಕ ಪ್ರಶಸ್ತಿಗಳು ಅರಸಿಕೊಂಡು ಬಂದಿವೆ.
ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು, ಚಿತ್ರದರ್ಗ ಜಿಲ್ಲೆಗಳ ಕಾಲೇಜುಗಳಲ್ಲಿ ಪಠ್ಯದ ಮೂಲಕ ಹಾಜಬ್ಬರ ಅಕ್ಷರ ಕ್ರಾಂತಿಗೆ ಮಾನ-ಸಂಮಾನ ಪ್ರಾಪ್ತವಾದಂತಾಗಿದೆ. ವಾಣಿಜ್ಯ ಪದವೀಧರರಿಗೆ ಸಾಮಾಜಿಕ ಸ್ಪಂದನದ ಜವಾಬ್ದಾರಿಯ ಸಂದೇಶ ಸಿಗಬೇಕೆನ್ನುವುದು ಪಠ್ಯಪುಸ್ತಕ ರೂಪೀಕರಣ ಸಮಿತಿಯ ಆಶಯ

ಪಠ್ಯದಲ್ಲಿ ಹಾಜಬ್ಬನವರ ಲೇಖನವೂ ಸೇರಿದಂತೆ ಕೃಷಿಋಷಿ ಚೇರ್ಕಾಡಿ ರಾಮಚಂದ್ರ ರಾಯರು, ಕಥೆಗಾರ್ತಿ ಅನುಪಮಾ ನಿರಂಜನ, ಪರಸರ ತಪಸ್ವಿ ಸಾಲುಮರದ ತಿಮ್ಮಕ್ಕ.. ಮೊದಲಾದ ಸಾಧಕರ ಬರೆಹಗಳೂ ಸೇರಿವೆ. ಸಾಹಿತ್ಯ ಸ್ಪಂದನ ಭಾಗ-2 ಪಠ್ಯವು 2016ರ ತನಕ ವಾಣಿಜ್ಯ ವಿಭಾಗಕ್ಕೆ ಪಠ್ಯವಾಗಲಿದೆ. ಒಟ್ಟು 132 ಪುಟಗಳು. ಪ್ರತೀ ಸಾಧಕರ ಬಗ್ಗೆ ಆರೇಳು ಪುಟಗಳ ಮಾಹಿತಿ. ಈ ಬರೆಹವು ಪ್ರಜಾವಾಣಿಯ ಸಾಪ್ತಾಹಿಕದಲ್ಲಿ ಈ ಹಿಂದೆ ಪ್ರಕಟವಾಗಿತ್ತು.

No comments:

Post a Comment