Thursday, February 2, 2012

ಮೊಂಟೆಪದವು ಕಾರಂತರಿಗೆ ನುಡಿನಮನ




"ಹಳ್ಳಿ ಮೂಲೆಯಲ್ಲಿ ಶೈಕ್ಷಣಿಕ ಸಂಸ್ಥೆಗಳ ಹುಟ್ಟಿಗೆ ಕಾರಣರಾಗಿ, ತನುಶ್ರಮವನ್ನು ಮರೆತು, ಕುಟುಂಬಕ್ಕಿಂತಲೂ ಶಾಲೆಯನ್ನು ಪ್ರೀತಿಸಿ ಬೆಳೆಸಿದವರು ಅಕ್ಷರ ಯೋಗಿ ಮೊಂಟೆಪದವು ಪರಮೇಶ್ವರ ಕಾರಂತರು. ಇವರು ಒಂದು ಕಾಲಘಟ್ಟದಲ್ಲಿ ಮನೆಮನೆಗೆ ತೆರಳಿ, ಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ಓಲೈಸಿ, ಹೆತ್ತವರಿಗೆ ಅಕ್ಷರದ ಮಹತ್ವವನ್ನು ಸಾರಿದವರು. ಶಿಸ್ತುಬದ್ಧ ಜೀವನ, ಆಡಳಿತದಿಂದ ಶಿಕ್ಷಣಕ್ಕೆ ಗೌರವ ತಂದವರು," ಎಂದು ನಿವೃತ್ತ ಅಧ್ಯಾಪಕ, ಕವಿ, ಸಾಹಿತಿ ಮುಳಿಯ ಶಂಕರ ಭಟ್ ಹೇಳಿದರು.

ಈಚೆಗೆ ನಿಧನರಾದ ಅಕ್ಷರಯೋಗಿ ಮೊಂಟೆಪದವು ಪರಮೇಶ್ವರ ಕಾರಂತರ ಸ್ವಗೃಹದಲ್ಲಿ ಜರುಗಿದ ಶೃದ್ಧಾಂಜಲಿ ಸಭೆಯಲ್ಲಿ ನುಡಿನಮನ ಸಲ್ಲಿಸುತ್ತಾ, 'ಅಧ್ಯಾಪಕನೊಬ್ಬನಿಗೆ ಆದರ್ಶಪ್ರಾಯರಾಗಿದ್ದ ಕಾರಂತರಂತಹ ಅಧ್ಯಾಪಕರ ರೂಪೀಕರಣ ಕಾಲದ ಆವಶ್ಯಕತೆ' ಎಂದರು.

ಸಭಾಧ್ಯಕ್ಷತೆಯನ್ನು ವಹಿಸಿದ್ದ ಹಿರಿಯರಾದ ಲಾಡ ನಾರಾಯಣ ಭಟ್ಟರು ದೀಪಜ್ವಲನದೊಂದಿಗೆ ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಸಮಾರಂಭವನ್ನು ಉದ್ಘಾಟಿಸಿದ್ದರು.

ಅಧ್ಯಾಪಕ ನಾರಾಯಣ ಮಣಿಯಾಣಿ, ಗೋಪಾಲ ಮಾಸ್ತರ್, ಅಬ್ದುಲ್ ಜಲೀಲ್, ಶಾಂತಲಾ ಕಾರಂತ, ಎಡಂಬಳೆ ಗೋಪಾಲ ಭಟ್, ಬಲೆತ್ತೋಡು ನಾರಾಯಣ ಶೆಟ್ಟಿ, ಅಮ್ಮೆಂಬಳ ಸುಬ್ಬಣ್ಣ ನಾವಡ, ಕೊಲ್ಲರಮಜಲು ಶಂಕರ ಭಟ್.. ಮೃತರ ಕೊಡುಗೆಗಳನ್ನು ಸ್ಮರಿಸಿಕೊಂಡರು.

ವಿಶ್ರಾಂತ ಪ್ರಾಂಶುಪಾಲ ಎ.ಸದಾಶಿವ ನಾವಡರ ಸ್ವಾಗತದೊಂದಿಗೆ ಆರಂಭವಾದ ಕಾರ್ಯಕ್ರಮವನ್ನು ಪತ್ರಕರ್ತ ನಾ. ಕಾರಂತ ಪೆರಾಜೆ ನಿರ್ವಹಿಸಿದರು. ಹಿರಿಯ ವೈದ್ಯರಾದ ಕೈರಂಗಳ ನಾರಾಯಣ ಹೊಳ್ಳರು ವಂದಿಸಿದರು.

ಈ ಸಂದರ್ಭದಲ್ಲಿ ಮೊಂಟೆಪದವು ಶೈಕ್ಷಣಿಕ ಸಂಸ್ಥೆಗಳಲ್ಲಿ ಜರುಗಿದ ಶೃದ್ಧಾಂಜಲಿ ಸಭೆಯ ನಡವಳಿಕೆಯನ್ನು ಮೃತರ ಚಿರಂಜೀವಿಗಳಾದ ಲಿಂಗನಾಥ ಕಾರಂತ, ವಾಸುದೇವ ಕಾರಂತ, ಶ್ರೀಕುಮಾರ ಕಾರಂತರಿಗೆ ಹಸ್ತಾಂತರಿಸಲಾಯಿತು. ಕೊನೆಯಲ್ಲಿ ಮಿತ್ರಭೋಜನ ಜರುಗಿತು.

No comments:

Post a Comment