Wednesday, August 29, 2012

'ಅಭಿವೃದ್ಧಿ-ಪರಿಸರ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ



ನಾ. ಕಾರಂತ ಪೆರಾಜೆಯವರಿಗೆ ಕರ್ನಾಟಕ ಘನ ಸರಕಾರದ ವಾರ್ತಾ ಇಲಾಖೆಯು ನೀಡುವ 'ಅಭಿವೃದ್ಧಿ-ಪರಿಸರ ಪತ್ರಿಕೋದ್ಯಮ ಪ್ರಶಸ್ತಿ' ಪ್ರದಾನ ಸಮಾರಂಭವು ಆ.27ರಂದು ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಜರುಗಿತು. ಕರ್ನಾಟಕ ಸರಕಾರದ ಮಾನ್ಯ ಮುಖ್ಯಮಂತ್ರಿಗಳಾದ ಜಗದೀಶ ಶೆಟ್ಟರ್ ಮತ್ತು ಉಪಮುಖ್ಯಮಂತ್ರಿ ಆರ್.ಅಶೋಕ್ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಸರಕಾರದ ಕಾರ್ಯದರ್ಶಿ ಬಸವರಾಜು, ವಾರ್ತಾ ಇಲಾಖೆಯ ನಿರ್ದೇಶಕ ಎನ್.ಆರ್. ವಿಶುಕುಮಾರ್ ಉಪಸ್ಥಿತರಿದ್ದರು.

Thursday, August 2, 2012

ಕನ್ನಡ ಕೌಸ್ತುಭ ಪ್ರಶಸ್ತಿ ಪ್ರದಾನ


ಬೊಳುವಾರಿನ 'ಸಾಂಸ್ಕೃತಿಕ ಕಲಾ ಕೇಂದ್ರ' ಇದರ ಆಶ್ರಯದಲ್ಲಿ ಕನ್ನಡ ಕೌಸ್ತುಭ ಪ್ರಶಸ್ತಿ ಪ್ರದಾನ ಸಮಾರಂಭವು ಜುಲೈ 27ರಂದು ಪುತ್ತೂರಿನ ಟೌನ್ ಬ್ಯಾಂಕ್ ಸಭಾಭವನದಲ್ಲಿ ಜರುಗಿತು.

ಸಮಾರಂಭವನ್ನು ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಕುಮಾರು ಆಯನಾ ವಿ. ರಮಣ್ ದೀಪಜ್ವಲಿಸಿ ಶುಭ ಚಾಲನೆ ನೀಡಿದಳು. ಪುತ್ತೂರು ವಕೀಲರ ಸಂಘದ ಆದ್ಯಕ್ಷ ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಮಹೇಶ್ ಕಜೆ ಸಭಾಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉಪ್ಪಿನಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷ ರಾಮಚಂದ್ರ ಮಣಿಯಾಣಿ, ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಕೆ. ಪದ್ಮನಾಭ ಶೆಟ್ಟಿ, ಪತ್ರಕರ್ತ ನಾ. ಕಾರಂತ ಪೆರಾಜೆ, ಮಂಗಳೂರಿನ ರಂಗಭಾರತಿಯ ನಿರ್ದೇಶಕ ಕೆ.ವಿ.ರಮಣ್ ಉಪಸ್ಥಿತರಿದ್ದರು.

ಡಾ.ರಾಘವೇಂದ್ರ ಬಂಗಾರಡ್ಕ ಗೀತೆ ರಚಿಸಿ ನಿರ್ಮಿಸಿದ ಭಾವಗೀತೆಗಳ ಅಡಕ ತಟ್ಟೆಯನ್ನು ಪುತ್ತೂರು ಪ್ರಗತಿ ಆಸ್ಪತ್ರೆಯ ಡಾ. ಸುಧಾ ಎಸ್. ರಾವ್ ಬಿಡುಗಡೆ ಮಾಡಿದರು. ಸಮಾರಂಭದಲ್ಲಿ ಹಿರಿಯ ರಂಗಭೂಮಿ ಮತ್ತು ಧಾರಾವಾಹಿ ಕಲಾವಿದ ಶೃಂಗೇರಿ ರಾಮಣ್ಣ ಇವರನ್ನು ಗೌರವಿಸಲಾಯಿತು. ರಂಗಕಲಾವಿದ ಚಿದಾನಂದ ಕಾಮತ್ ಕಾಸರಗೋಡು ಇವರ ನೇತೃತ್ವದಲ್ಲಿ ಕನ್ನಡ ಕೌಸ್ತುಭ ಪ್ರಶಸ್ತಿ, ಕನ್ನಡ ಕುವರ ಪ್ರಶಸ್ತಿ, ಕನ್ನಡ ಕುವರಿ ಪ್ರಶಸ್ತಿಗಳನ್ನು ವಿತರಿಸಲಾಯಿತು.

ಬಿಡುಗಡೆಗೊಂಡ ಅಡಕ ತಟ್ಟೆ 'ಚೈತನ್ಯದ ಹೊನಲು' ಇದರಲ್ಲಿರುವ ಆಯ್ದ ಗೀತೆಗಳನ್ನು ಪುತ್ತೂರು ಪಾಂಡರಂಗ ನಾಯಕ್ ಹಾಡಿದರು. ಕುಮಾರಿ ಆಯನಾ ವಿ. ರಮಣ್ ಇವರಿಂದ ನೃತ್ಯ ಪ್ರತಿಭಾ ಪ್ರದರ್ಶನ ಜರುಗಿತು. ಚಿದಾನಂದ ಕಾಮತ್ ಕಾಸರಗೋಡು ಕಾರ್ಯಕ್ರಮವನ್ನು ಆಯೋಜಿಸಿದ್ದರು.

Wednesday, July 11, 2012

ಚೊಚ್ಚಲ ಸಂಮಾನ

ಸುಳ್ಯದ ಲಯನ್ಸ್ ಸಭಾಭವನದಲ್ಲಿ (11-7-2012) ಪತ್ರಿಕಾ ದಿನಾಚರಣೆ. ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ(ರಿ)ದ ಸಾರಥ್ಯ. ಸಂಘದ ಅಧ್ಯಕ್ಷ, ಉದಯವಾಣಿಯ ವರದಿಗಾರರಾದ ಶ್ರೀ ಗಂಗಾಧರ ಮಟ್ಟಿಯವರ ಅಧ್ಯಕ್ಷತೆ. ಮಂಗಳೂರು ಪ್ರಜಾವಾಣಿಯ ಬ್ಯೂರೋ ಚೀಫ್ ಶ್ರಿ ಬಾಲಕೃಷ್ಣ ಪುತ್ತಿಗೆಯವರಿಂದ ದೀಪಜ್ವಲನ ಮತ್ತು ಉಪನ್ಯಾಸ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಶ್ರೀ ಉಮಾನಾಥ ಎ. ಕೋಟ್ಯಾನ್, ಕರ್ನಾಟಕ ಅರೆಭಾಷೆ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿಯ ಅಧ್ಯಕ್ಷ ಶ್ರೀ ಎನ್.ಎಸ್.ದೇವಿಪ್ರಸಾದರಿಂದ 'ಭಾಷೆಗಳ ಔಚಿತ್ಯ’ದ ಕುರಿತು ಮಾತುಕತೆ. ದಕ್ಷಿಣ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಗ್ರಾಮಾಂತರ ಕಾರ್ಯದರ್ಶಿ ಶ್ರೀ ಹರೀಶ್ ಬಂಟ್ವಾಳ ಮತ್ತು ಹಿರಿಯ ಪತ್ರಕರ್ತ ಶ್ರೀ ಮಲಾರು ಜಯರಾಮ ರೈ, ಸುಳ್ಯ ಪತ್ರಕರ್ತರ ಸಂಘದ ಖಜಾಂಜಿ ಶ್ರೀ ಗಿರೀಶ್ ಅಡ್ಪಂಗಾಯ ವೇದಿಕೆಯಲ್ಲಿ ಉಪಸ್ಥಿತಿ. ನಾ. ಕಾರಂತರಿಗೆ ಸಂಮಾನ. ಜಯಪ್ರಕಾಶ್ ಕುಕ್ಕೆಟ್ಟಿಯವರಿಂದ ಅಭಿನಂದನಾ ನುಡಿ. ಶ್ರೀ ದುರ್ಗಾಕುಮಾರ್ ನಾಯರಕೆರೆ ಪ್ರಸ್ತಾವನೆ, ಶ್ರೀ ಚೇತನರಾಂ ಇರಂತಕಜೆಯವರಿಂದ ಸ್ವಾಗತ, ಶ್ರೀ ಲೋಕೇಶ್ ಪೆರ್ಲಂಪಾಡಿ ನಿರೂಪಣೆ. ವಿವಿಧ ಶಾಲೆಗಳ ವಿದ್ಯಾರ್ಥಿಗಳಿಂದ ಸಂವಾದ.

Saturday, March 24, 2012

ಬೋಳಂತಕೋಡಿ ನೆನಪು ಮತ್ತು ಪ್ರಶಸ್ತಿ ಪ್ರದಾನ



ನ್ಯಾಯವಾದಿ, ಲೇಖಕ, ಪ್ರಕಾಶಕ, ಪುತ್ತೂರು ಕರ್ನಾಟಕ ಸಂಘದ ನಿಕಟಪೂರ್ವ ಅಧ್ಯಕ್ಷ ಕೀರ್ತಿಶೇಷ ಬೋಳಂತಕೋಡಿ ಈಶ್ವರ ಭಟ್ಟರ (Bolanthakodi Ishwara Bhat) ನೆನಪು ಕಾರ್ಯಕ್ರಮ ಇಂದು (24-3-2012) ಪುತ್ತೂರಿನ ಟೌನ್ ಬ್ಯಾಂಕ್ ಸಭಾಂಗಣದಲ್ಲಿ ಸಂಜೆ ಗಂಟೆ 4-20ಕ್ಕೆ ಜರುಗಿತು. ಸಭಾಧ್ಯಕ್ಷತೆಯನ್ನು ಪುತ್ತೂರು ಕರ್ನಾಟಕ ಸಂಘದ ಅಧ್ಯಕ್ಷ ಬಿ.ಪುರಂದರ ಭಟ್ ವಹಿಸಿದ್ದರು.


ವಿದ್ವಾಂಸ ಲಕ್ಷ್ಮೀಶ ತೋಳ್ಪಾಡಿಯವರು ಬೋಳಂತಕೋಡಿಯವರ ಒಡನಾಟವನ್ನು ಜ್ಞಾಪಿಸಿಕೊಳ್ಳುತ್ತಾ, "ಈಶ್ವರ ಭಟ್ಟರದು ಪ್ರಾಕ್ಟಿಕಲ್ ಬದುಕು. ಬದುಕಿನಲ್ಲಿ ದೊಡ್ಡ ಕನಸುಗಳನ್ನು ಕಾಣುತ್ತಿದ್ದ ಅವರು 'ಕನಸು ಕಾಣುತ್ತಿದ್ದರು' ಅಂತ ಗೊತ್ತಾಗದಂತೆ ಬದುಕಿರುವುದು ವಿಶೇಷ ಅಂತ ಅನ್ನಿಸುತ್ತದೆ. ಬದುಕನ್ನು ಅವರು ಇಷ್ಟವಾದ ಹಾಗೆ 'ಚಂದ'ದಿಂದ ಅನುಭವಿಸಿದವರು. ಅವರು ಎಂದೂ ಹುಸಿಯಾಗಿ ಓಲೈಸಿಲ್ಲ. ಅವರಿಗೆ ಅವರನ್ನು ಓಲೈಸಲು ಸಾಧ್ಯವಾಗಲಿಲ್ಲ! ಉಪದೇಶ ಹೇಳುವವರಲ್ಲ, ಇನ್ನೊಬ್ಬರ ಉಪದೇಶವನ್ನೂ ಕೇಳಿದವರಲ್ಲ!" ಎಂದರು.


ಬೋಳಂತಕೋಡಿಯವರ ನೆನಪಿನಲ್ಲಿ 'ಬೋಳಂತಕೋಡಿ ಕನ್ನಡ ಪ್ರಶಸ್ತಿ'ಯನ್ನು ಪ್ರಥಮವಾಗಿ ಸ್ಥಾಪಿಸಲಾಗಿದ್ದು, ಮೊದಲ ಪ್ರಶಸ್ತಿಗೆ ಮಕ್ಕಳ ಸಾಹಿತಿ ಹಿರಿಯರಾದ ಪಳಕಳ ಸೀತಾರಾಮ ಆಯ್ಕೆಯಾಗಿದ್ದರು. ಪ್ರಶಸ್ತಿ ಪುರಸ್ಕೃತರ ಕುರಿತು ಪ್ರೊ: ವಿ.ಬಿ.ಅರ್ತಿಕಜೆ ಮಾತನಾಡಿದರು. ಗುಣಕಥನ ಫಲಕವನ್ನು ಉಪನ್ಯಾಸಕ ಡಾ. ವಿಜಯಕುಮಾರ್ ಮೊಳೆಯಾರ್ ವಾಚಿಸಿದರು. ಪಳಕಳ ಸೀತಾರಾಮ ಭಟ್ಟರ ಪತ್ರವನ್ನು ಕಿರಣ್ ಬೋಳಂತಕೋಡಿ ವಾಚಿಸಿದರು. ಪಳಕಳದವರು ಅಸೌಖ್ಯದ ಕಾರಣದಿಂದ ಉಪಸ್ಥಿತರಲಿಲ್ಲ. ಅವರ ಮನೆಗೆ ತೆರಳಿ ಪ್ರಶಸ್ತಿಯನ್ನು ಪ್ರದಾನ ಮಾಡುವುದೆಂದು ಘೋಷಿಸಲಾಯಿತು. ಪ್ರಶಸ್ತಿಯು ಶಾಲು, ಫಲ, ಹಾರ, ಗುಣಕಥನ ಫಲಕ, ಪ್ರಶಸ್ತಿ ಫಲಕ ಮತ್ತು ಹತ್ತು ಸಾವಿರ ರೂಪಾಯಿಯ ಧನ' ಒಳಗೊಂಡಿದೆ.


ಅಡಿಕೆ ಪತ್ರಿಕೆಯ ಸಹಾಯಕ ಸಂಪಾದಕ ನಾ. ಕಾರಂತ ಪೆರಾಜೆಯವರ ಕೃಷಿ ಬರೆಹಗಳ ಸಂಕಲನ 'ಮಣ್ಣ ಮಿಡಿತ' ಮತ್ತು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಅಂಕಣದ ಆಯ್ದ ಬರಹೆಗಳ ಸಂಕಲನ 'ಮಾಂಬಳ' ಪುಸ್ತಕವನ್ನು ರಾಜೇಶ್ ಪವರ್ ಪ್ರೆಸ್ ಮಾಲಕ ಎಂ.ಎಸ್.ರಘುನಾಥ ರಾವ್ ಬಿಡುಗಡೆ ಮಾಡಿದರು. ಪುಸ್ತಕಗಳ ಕುರಿತು ಉಪನ್ಯಾಸಕ ಅವಿನಾಶ್ ಕೊಡೆಂಕಿರಿ ಪರಿಚಯ ಮಾಡಿದರು.


ನ್ಯಾಯವಾದಿ ಕೆ.ಆರ್.ಆಚಾರ್ಯ ಸ್ವಾಗತಿಸಿದರು. ಪ್ರಕಾಶ್ ಕುಮಾರ್ ಕೊಡೆಂಕಿರಿ ವಂದಿಸಿದರು. ವಿವೇಕಾನಂದ ಕಾಲೇಜಿನ ಉಪನ್ಯಾಸಕ ಡಾ.ಶ್ರೀಶಕುಮಾರ್ ನಿರ್ವಹಿಸಿದರು. ಕೊನೆಯಲ್ಲಿ ಆಕಾಶ್ ಆಚಾರ್ಯ ಇವರಿಂದ ಕರ್ನಾಟಕ ಶಾಸ್ತ್ರೀಯ ಸಂಗಿತ ಕಛೇರಿ ಜರುಗಿತು. ಬೋಳಂತಕೋಡಿ ಪ್ರಕಾಶನ, ಪುತ್ತೂರು ಕಾರ್ಯಕ್ರಮವನ್ನು ಸಂಘಟಿಸಿತ್ತು. ಪ್ರತೀ ವರುಷವೂ ಪುತ್ತೂರಿನಲ್ಲಿ ಬೋಳಂತಕೋಡಿಯವರ ನೆನಪು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು.

Sunday, February 26, 2012

’ಸಿದ್ಧಮೂಲೆ’ಯವರಿಗೆ ’ಮುದ್ದಣ ಪುರಸ್ಕಾರ’ ಪ್ರದಾನ


"ಶಬ್ದಕೋಶ ತಯಾರಿಯಲ್ಲಿ ಕೋಶರಚನಾಕಾರನ ಶ್ರಮ ಎಲ್ಲೂ ದಾಖಲಾಗುವುದಿಲ್ಲ. ಆತ ಅವಜ್ಞೆಗೆ ಒಳಗಾಗಿದ್ದಾನೆ. ಶಬ್ದವೊಂದರ ಎಲ್ಲಾ ಮಗ್ಗುಲುಗಳನ್ನು ಅಧ್ಯಯನ ಮಾಡಿ, ಅದರ ಸಾರಸಂಗ್ರಹವನ್ನು ಸಿದ್ಧಪಡಿಸಲು ಕಾಲದ ಪರಿವೆಯಿಲ್ಲದೆ ದುಡಿಯಬೇಕಾಗುತ್ತದೆ. ಆದರೆ ಬದಲಾದ ಶಿಕ್ಷಣ ವ್ಯವಸ್ಥೆಯಲ್ಲಿ ಭಾಷೆ, ಶಬ್ಧಗಳ ಅನಾದರ ಎದ್ದುಕಾಣುತ್ತಿರುವುದು ವಿಷಾದನೀಯ" ಎಂದು ಹಿರಿಯ ವಿದ್ವಾಂಸ ಡಾ.ಪಾದೆಕಲ್ಲು ವಿಷ್ಣು ಭಟ್ ಹೇಳಿದರು.

ಅವರು ರವಿವಾರ (26-2-2012) ಬಹುಭಾಷಾ ಪಂಡಿತ, ಸೇವಾತತ್ಪರ, ಅನುವಾದಕ ಶ್ರೀ ಸಿದ್ಧಮೂಲೆ ಶಂಕರನಾರಾಯಣ ಭಟ್ಟರಿಗೆ, ಮಂಗಳೂರಿನ 'ಮುದ್ದಣ ಪ್ರಕಾಶನ ಮುದ್ದಣ ಚಾವಡಿ'ಯ ಈ ವರುಷದ 'ಪುದ್ದಣ ಪುರಸ್ಕಾರ' ನೀಡಿ ಗೌರವಿಸುತ್ತಾ, ಸಿದ್ಧಮೂಲೆಯವರ ಸಿದ್ದಿ, ಸಾಧನೆಗಳನ್ನು ವಿವರಿಸಿ, 'ಹಳ್ಳಿಮೂಲೆಯಲ್ಲಿ ಸದ್ದಿಲ್ಲದೆ ಸಾರಸ್ವತ ಲೋಕಕ್ಕೆ ಗಣನೀಯ ಪ್ರಮಾಣದಲ್ಲಿ ವಾಙ್ಮಯ ಕೊಡುಗೆ ನೀಡಿದ ಸಿದ್ದಮೂಲೆಯವರಿಗೆ ಕನ್ನಾಡಿನಲ್ಲಿ ಸಿಗಬೇಕಾದ ಮಾನ್ಯತೆ ಸಿಗಲಿಲ್ಲ' ಎಂದು ವಿಷಾದಿಸಿದರು.

ಡಾ.ಪಾದೆಕಲ್ಲು ವಿಷ್ಣು ಭಟ್ಟರು ಶಾಲು, ಫಲತಾಂಬೂಲ, ಪುರಸ್ಕಾರ ಫಲಕ ಮತ್ತು ನಿಧಿಯೊಂದಿಗೆ ಭಟ್ಟರನ್ನು ಗೌರವಿಸಿದರು. 'ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ, ಸಾಮಾಜಿಕ ಋಣವನ್ನು ತೀರಿಸುವ ಉದ್ದೇಶದಿಂದ ಬೇರೆ ಬೇರೆ ಕ್ಷೇತ್ರದಲ್ಲಿ ಒಂದಷ್ಟು ಕೆಲಸಗಳನ್ನು ಮಾಡಿದ ಸಂತೃಪ್ತಿ ನನಗಿದೆ' ಎಂದರು ಸಿದ್ಧಮೂಲೆ ಶಂಕರನಾರಾಯಣ ಭಟ್.

ಪುತ್ತೂರು ಸನಿಹದ ಪೆರ್ಲಂಪಾಡಿಯ ಸಿದ್ಧಮೂಲೆಯವರ ಸ್ವಗೃಹದಲ್ಲಿ ಜರುಗಿದ ಸರಳ ಸಮಾರಂಭದಲ್ಲಿ ಪುತ್ತೂರು ವಿವೇಕಾನಂದ ಕಾಲೇಜಿನ ಆಡಳಿತಾಧಿಕಾರಿ ಶ್ರೀ ಕೆ.ವಿ.ನಾರಾಯಣ ಅವರು ಸಿದ್ಧಮೂಲೆಯವರ ಒಡನಾಟವನ್ನು ಜ್ಞಾಪಿಸಿಕೊಳ್ಳುತ್ತಾ ಅಭಿನಂದಿಸಿದರು.

ಮಂಗಳೂರಿನ ಮುದ್ದಣ ಪ್ರಕಾಶನದ ಗೌರವ ನಿರ್ದೇಶಕ, ಪ್ರಕಾಶಕ ಶ್ರೀ ನಂದಳಿಕೆ ಬಾಲಚಂದ್ರ ರಾವ್ ಕಾರ್ಯಕ್ರಮವನ್ನು ನಿರ್ವಹಿಸಿ, ಸ್ವಾಗತಿಸಿದರು. ಪತ್ರಕರ್ತ, ವಿಮರ್ಶಕ ನಾ. ಕಾರಂತ ಪೆರಾಜೆ ವಂದಿಸಿದರು. ಸಮಾರಂಭದಲ್ಲಿ ಸಿದ್ಧಮೂಲೆಯವರ ಎಲ್ಲಾ ಬಂಧುಗಳು ಉಪಸ್ಥಿತರಿದ್ದರು.

Monday, February 6, 2012

ಪಠ್ಯಕ್ಕೆ ಸೇರ್ಪಡೆಗೊಂಡ 'ಹಾಜಬ್ಬ ಲೇಖನ'

ನಾ. ಕಾರಂತ ಪೆರಾಜೆಯವರು ಅಕ್ಷರಯೋಗಿ ಹಾಜಬ್ಬರ ಕುರಿತು ಪ್ರಜಾವಾಣಿಯಲ್ಲಿ ಬರೆದ ಬರೆಹವು ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯ ಹಾಗೂ ದಾವಣಗೆರೆ ವಿಶ್ವವಿದ್ಯಾಲಯಗಳ ವಾಣಿಜ್ಯ ವಿಭಾಗದ ನಾಲ್ಕನೇ ಸೆಮಿಸ್ಟರ್ನ ಕನ್ನಡ ಪಠ್ಯದಲ್ಲಿ ಸೇರ್ಪಡೆಗೊಂಡಿದೆ. ಈ ಶೈಕ್ಷಣಿಕ ವರ್ಷದಿಂದಲೇ ಹಾಜಬ್ಬರ ಸಾಧನೆ ಕುರಿತ ಕನ್ನಡ ಪಠ್ಯ 'ಸಾಹಿತ್ಯ ಸ್ಪಂದನ ಭಾಗ-2 ರಚನೆಗೊಂಡಿದೆ.

ಹಾಜಬ್ಬ ಕಿತ್ತಳೆ ವ್ಯಾಪಾರಿ. ಹರೇಕಳದ ನ್ಯೂಪಡ್ಪು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ಪ್ರೌಢ ಶಾಲೆಯ ಮಟ್ಟಕ್ಕೆ ಕೊಂಡಯ್ದ ಸಾಹಸಿ. ದಾನಿಗಳ ನೆರವಿನಿಂದ ಹಳ್ಳಿಯಲ್ಲಿ ಅಕ್ಷರಕ್ರಾಂತಿಯನ್ನು ಮಾಡಿದ ಯೋಗಿ ಹಾಜಬ್ಬರು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದಾರೆ. ಕನ್ನಾಡಿನ ಎಲ್ಲಾ ಪತ್ರಿಕೆಗಳು ಅವರ ಸಾಧನೆಗೆ ಬೆಳಕು ಹಾಕಿವೆ. ಅನೇಕ ಪ್ರಶಸ್ತಿಗಳು ಅರಸಿಕೊಂಡು ಬಂದಿವೆ.
ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು, ಚಿತ್ರದರ್ಗ ಜಿಲ್ಲೆಗಳ ಕಾಲೇಜುಗಳಲ್ಲಿ ಪಠ್ಯದ ಮೂಲಕ ಹಾಜಬ್ಬರ ಅಕ್ಷರ ಕ್ರಾಂತಿಗೆ ಮಾನ-ಸಂಮಾನ ಪ್ರಾಪ್ತವಾದಂತಾಗಿದೆ. ವಾಣಿಜ್ಯ ಪದವೀಧರರಿಗೆ ಸಾಮಾಜಿಕ ಸ್ಪಂದನದ ಜವಾಬ್ದಾರಿಯ ಸಂದೇಶ ಸಿಗಬೇಕೆನ್ನುವುದು ಪಠ್ಯಪುಸ್ತಕ ರೂಪೀಕರಣ ಸಮಿತಿಯ ಆಶಯ

ಪಠ್ಯದಲ್ಲಿ ಹಾಜಬ್ಬನವರ ಲೇಖನವೂ ಸೇರಿದಂತೆ ಕೃಷಿಋಷಿ ಚೇರ್ಕಾಡಿ ರಾಮಚಂದ್ರ ರಾಯರು, ಕಥೆಗಾರ್ತಿ ಅನುಪಮಾ ನಿರಂಜನ, ಪರಸರ ತಪಸ್ವಿ ಸಾಲುಮರದ ತಿಮ್ಮಕ್ಕ.. ಮೊದಲಾದ ಸಾಧಕರ ಬರೆಹಗಳೂ ಸೇರಿವೆ. ಸಾಹಿತ್ಯ ಸ್ಪಂದನ ಭಾಗ-2 ಪಠ್ಯವು 2016ರ ತನಕ ವಾಣಿಜ್ಯ ವಿಭಾಗಕ್ಕೆ ಪಠ್ಯವಾಗಲಿದೆ. ಒಟ್ಟು 132 ಪುಟಗಳು. ಪ್ರತೀ ಸಾಧಕರ ಬಗ್ಗೆ ಆರೇಳು ಪುಟಗಳ ಮಾಹಿತಿ. ಈ ಬರೆಹವು ಪ್ರಜಾವಾಣಿಯ ಸಾಪ್ತಾಹಿಕದಲ್ಲಿ ಈ ಹಿಂದೆ ಪ್ರಕಟವಾಗಿತ್ತು.

Thursday, February 2, 2012

ಮೊಂಟೆಪದವು ಕಾರಂತರಿಗೆ ನುಡಿನಮನ




"ಹಳ್ಳಿ ಮೂಲೆಯಲ್ಲಿ ಶೈಕ್ಷಣಿಕ ಸಂಸ್ಥೆಗಳ ಹುಟ್ಟಿಗೆ ಕಾರಣರಾಗಿ, ತನುಶ್ರಮವನ್ನು ಮರೆತು, ಕುಟುಂಬಕ್ಕಿಂತಲೂ ಶಾಲೆಯನ್ನು ಪ್ರೀತಿಸಿ ಬೆಳೆಸಿದವರು ಅಕ್ಷರ ಯೋಗಿ ಮೊಂಟೆಪದವು ಪರಮೇಶ್ವರ ಕಾರಂತರು. ಇವರು ಒಂದು ಕಾಲಘಟ್ಟದಲ್ಲಿ ಮನೆಮನೆಗೆ ತೆರಳಿ, ಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ಓಲೈಸಿ, ಹೆತ್ತವರಿಗೆ ಅಕ್ಷರದ ಮಹತ್ವವನ್ನು ಸಾರಿದವರು. ಶಿಸ್ತುಬದ್ಧ ಜೀವನ, ಆಡಳಿತದಿಂದ ಶಿಕ್ಷಣಕ್ಕೆ ಗೌರವ ತಂದವರು," ಎಂದು ನಿವೃತ್ತ ಅಧ್ಯಾಪಕ, ಕವಿ, ಸಾಹಿತಿ ಮುಳಿಯ ಶಂಕರ ಭಟ್ ಹೇಳಿದರು.

ಈಚೆಗೆ ನಿಧನರಾದ ಅಕ್ಷರಯೋಗಿ ಮೊಂಟೆಪದವು ಪರಮೇಶ್ವರ ಕಾರಂತರ ಸ್ವಗೃಹದಲ್ಲಿ ಜರುಗಿದ ಶೃದ್ಧಾಂಜಲಿ ಸಭೆಯಲ್ಲಿ ನುಡಿನಮನ ಸಲ್ಲಿಸುತ್ತಾ, 'ಅಧ್ಯಾಪಕನೊಬ್ಬನಿಗೆ ಆದರ್ಶಪ್ರಾಯರಾಗಿದ್ದ ಕಾರಂತರಂತಹ ಅಧ್ಯಾಪಕರ ರೂಪೀಕರಣ ಕಾಲದ ಆವಶ್ಯಕತೆ' ಎಂದರು.

ಸಭಾಧ್ಯಕ್ಷತೆಯನ್ನು ವಹಿಸಿದ್ದ ಹಿರಿಯರಾದ ಲಾಡ ನಾರಾಯಣ ಭಟ್ಟರು ದೀಪಜ್ವಲನದೊಂದಿಗೆ ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಸಮಾರಂಭವನ್ನು ಉದ್ಘಾಟಿಸಿದ್ದರು.

ಅಧ್ಯಾಪಕ ನಾರಾಯಣ ಮಣಿಯಾಣಿ, ಗೋಪಾಲ ಮಾಸ್ತರ್, ಅಬ್ದುಲ್ ಜಲೀಲ್, ಶಾಂತಲಾ ಕಾರಂತ, ಎಡಂಬಳೆ ಗೋಪಾಲ ಭಟ್, ಬಲೆತ್ತೋಡು ನಾರಾಯಣ ಶೆಟ್ಟಿ, ಅಮ್ಮೆಂಬಳ ಸುಬ್ಬಣ್ಣ ನಾವಡ, ಕೊಲ್ಲರಮಜಲು ಶಂಕರ ಭಟ್.. ಮೃತರ ಕೊಡುಗೆಗಳನ್ನು ಸ್ಮರಿಸಿಕೊಂಡರು.

ವಿಶ್ರಾಂತ ಪ್ರಾಂಶುಪಾಲ ಎ.ಸದಾಶಿವ ನಾವಡರ ಸ್ವಾಗತದೊಂದಿಗೆ ಆರಂಭವಾದ ಕಾರ್ಯಕ್ರಮವನ್ನು ಪತ್ರಕರ್ತ ನಾ. ಕಾರಂತ ಪೆರಾಜೆ ನಿರ್ವಹಿಸಿದರು. ಹಿರಿಯ ವೈದ್ಯರಾದ ಕೈರಂಗಳ ನಾರಾಯಣ ಹೊಳ್ಳರು ವಂದಿಸಿದರು.

ಈ ಸಂದರ್ಭದಲ್ಲಿ ಮೊಂಟೆಪದವು ಶೈಕ್ಷಣಿಕ ಸಂಸ್ಥೆಗಳಲ್ಲಿ ಜರುಗಿದ ಶೃದ್ಧಾಂಜಲಿ ಸಭೆಯ ನಡವಳಿಕೆಯನ್ನು ಮೃತರ ಚಿರಂಜೀವಿಗಳಾದ ಲಿಂಗನಾಥ ಕಾರಂತ, ವಾಸುದೇವ ಕಾರಂತ, ಶ್ರೀಕುಮಾರ ಕಾರಂತರಿಗೆ ಹಸ್ತಾಂತರಿಸಲಾಯಿತು. ಕೊನೆಯಲ್ಲಿ ಮಿತ್ರಭೋಜನ ಜರುಗಿತು.

Friday, January 20, 2012

ಮೊಂಟೆಪದವು ಪರಮೇಶ್ವರ ಕಾರಂತ





ಬಂಟ್ವಾಳ ತಾಲೂಕು ಕೈರಂಗಳ ಸಮೀಪದ ಮೊಂಟೆಪದವು ಪ್ರೌಢಶಾಲೆಯಲ್ಲಿ ಸ್ಥಾಪಕ ಮುಖ್ಯೋಪಾಧ್ಯಾಯರಾಗಿ ಸೇವೆಸಲ್ಲಿಸಿ 1992ರಲ್ಲಿ ನಿವೃತ್ತರಾಗಿದ್ದ ಹೆಚ್.ಪರಮೇಶ್ವರ ಕಾರಂತ(76)ರು ೧೯-೧-೨೦೧೨ರಂದು ಮುಂಜಾನೆ ದೈವಾಧೀನರಾಗಿದ್ದಾರೆ. ಮೃತರು ಪತ್ನಿ, ಮೂವರು ಪುತ್ರರು ಮತ್ತು ಅಪಾರ ಬಂಧುಗಳನ್ನು, ಅಭಿಮಾನಿಗಳನ್ನು, ಶಿಷ್ಯಗಡಣವನ್ನು ಅಗಲಿದ್ದಾರೆ. ಕಾರಂತರು ಮೂಲತಃ ಕಾಸರಗೋಡು ಸನಿಹದ ಪಳ್ಳಿಕೆರೆ ಹಾರ್ನಾಡಿನವರು.

ಮರ್ಕಂಜ, ಉಳ್ಳಾಲ, ಮಂಜನಾಡಿ, ಮಂಗಳೂರಿನ ಗಾಂಧಿನಗರ ಶಾಲೆಗಳಲ್ಲಿ ಪರಮೇಶ್ವರ ಕಾರಂತರು ಸೇವೆ ಸಲ್ಲಿಸಿದ್ದರು. ಮೊಂಟೆಪದವು ಪ್ರಾಥಮಿಕ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸುತ್ತಿರುವಾಗಲೇ ಅದರ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಕಾರಂತರದು ದೊಡ್ಡ ಹೆಜ್ಜೆ. ಪ್ರಾಥಮಿಕ ಹಂತದಿಂದ ಪ್ರೌಢ ಶಾಲೆಯ ತನಕ ಶಾಲೆಯನ್ನು ಕಟ್ಟಿ ಬೆಳೆಸಿ, ಅಲ್ಲೇ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ ನಿವೃತ್ತರಾದವರು. ಬದುಕಿನ ಬಹುಪಾಲು ಸಮಯವನ್ನು ಶಾಲಾಭಿವೃದ್ಧಿಗೆ ಮೀಸಲಾಗಿಟ್ಟ ಕಾರಂತರು ಸಾಮಾಜಿಕವಾಗಿ ಮನ್ನಣೆಯನ್ನು ಪಡೆದಿದ್ದರು.

ಪ್ರಾಮಾಣಿಕತೆ, ಶಿಸ್ತು, ನಿಯತ್ತುಗಳಲ್ಲಿ ಎಂದೂ ರಾಜಿ ಮಾಡಿಕೊಳ್ಳದ ಪರಮೇಶ್ವರ ಕಾರಂತರು ಶುದ್ಧಹಸ್ತರು. ಶಾಲಾ ಆಡಳಿತ ರೂಪಿಸುವಲ್ಲಿ ಮತ್ತು ನಿರ್ವಹಿಸುವಲ್ಲಿ ತನ್ನದೇ ಆದ ಚಾಕಚಕ್ಯತೆಯನ್ನು ಹೊಂದಿ ಜನಾನುರಾಗಿಯಾಗಿದ್ದರು. ಶಾಲೆಯ ವಿಚಾರ ಬಂದಾಗ ವೈಯಕ್ತಿಕ ವಿಚಾರಗಳೆಲ್ಲವೂ ಅವರಿಗೆ ಗೌಣವಾಗಿತ್ತು.

ಪರಮೇಶ್ವರ ಕಾರಂತರ ಶಾಲಾ ಅಭಿವೃದ್ಧಿಯ ದೀಕ್ಷೆಯಲ್ಲಿ ಅಧ್ಯಾಪಿಕೆಯಾಗಿ ಪತ್ನಿ ಲಕ್ಷ್ಮೀ ಕಾರಂತರ ಪಾತ್ರವೂ ದೊಡ್ಡದೇ. ಕುಟುಂಬದಲ್ಲಿ, ಸಮಾಜದಲ್ಲಿ ಹಿರಿಯಣ್ಣನಾಗಿದ್ದರು. ಆರ್ತರಿಗೆ ನೆರವಾಗುವ ಗುಣ. ಗಾಂಧಿ ಮಾರ್ಗದಲ್ಲಿ ನಂಬಿಕೆಯಿಟ್ಟು ಅದರಂತೆ ಬದುಕಿದವರು. ಬದುಕಿನುದ್ದಕ್ಕೂ ಸರಳ, ನಿರಾಡಂಬರ ಜೀವನಕ್ಕೆ ಪರಮೇಶ್ವರ ಕಾರಂತರು ಮಾದರಿಯಾಗಿದ್ದರು.

ಮೃತರಿಗೆ ಗೌರವಸೂಚಕವಾಗಿ ಮೊಂಟೆಪದವಿನ ಪ್ರಾಥಮಿಕ, ಮಾಧ್ಯಮಿಕ ಹಾಗೂ ಪ್ರೌಢಶಾಲೆಗಳಿಗೆ ತಾ.೧೯ರಂದು ರಜಾ ಸಾರಲಾಗಿತ್ತು.