Friday, November 5, 2010

'ಹಾರಕ' - ಸ್ಪರ್ಧಾ ಬಹುಮಾನ/ಪ್ರಶಸ್ತಿ ಪ್ರದಾನ

ಉದಯವಾಣಿಯಲ್ಲಿ ಪ್ರಕಟವಾದ ನಾ. ಕಾರಂತ ಪೆರಾಜೆ ಅವರ 'ಉಳಿಸಬೇಕಿದೆ, ಈ ಕಿರುಧಾನ್ಯ : ಹಾರಕ' ಬರೆಹಕ್ಕೆ 'ಭಾರತೀಯ ಕಿರುಧಾನ್ಯಗಳ ಜಾಲ'ವು ಪ್ರಾಯೋಜಿಸುವ ಲೇಖನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಬಂದಿರುತ್ತದೆ. ಇತ್ತೀಚೆಗೆ ಮೂಡಿಗೆರೆ ಸನಿಹದ ದೇವವೃಂದದಲ್ಲಿ ನಡೆದ ಕೃಷಿ ಮಾಧ್ಯಮ ಕೇಂದ್ರದ (ಕಾಮ್) ದಶಮಾನ ಕಾರ್ಯಕ್ರಮದಲ್ಲಿ ಡೆಕ್ಕನ್ ಡೆವಲಪ್ಮೆಂಟ್ ಸೊಸೈಟಿಯ ಕಮ್ಯೂನಿಟಿ ಮೀಡಿಯಾ ಮೊಲ್ಲಮ್ಮ ಪ್ರಶಸ್ತಿ ಪತ್ರ ಮತ್ತು ಬಹುಮಾನ ಮೊತ್ತ ರೂ.5,000 ನೀಡಿ ಗೌರವಿಸಿದರು. ಮಿಲೆಟ್ ನೆಟ್ವರ್ಕ್ ಆಫ್ ಇಂಡಿಯಾದ ರಾಷ್ಟ್ರೀಯ ಸಂಯೋಜಕ ವಟ್ಟೂರಿ ಶ್ರೀನಿವಾಸ್ ಸಂದರ್ಭೋಚಿತವಾಗಿ ಮಾತನಾಡಿದರು. ಕಾಮ್ ದಶಮಾನ ವೇದಿಕೆಯಲ್ಲಿ ಶ್ರೀ ಪಡ್ರೆ, ವೈ.ಸಿ.ರುದ್ರಪ್ಪ, ಎಸ್.ಎಂ.ಪಾಟೀಲ, ಡಿ.ಬಿ.ಸುಬ್ಬೇಗೌಡ, ಅನಿತಾ ಪೈಲೂರು ಉಪಸ್ಥಿತರಿದ್ದರು.

Thursday, November 4, 2010

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

ಮೂಡಿಗೆರೆ ಸನಿಹದ ದೇವವೃಂದದಲ್ಲಿ ನವೆಂಬರ್ 28ರಿಂದ 30ರ ತನಕ ಕೃಷಿ ಮಾಧ್ಯಮ ಕೇಂದ್ರದ ಪತ್ರಿಕೋದ್ಯಮ ತರಬೇತಿ ಶಿಬಿರ. ನ.31ರಂದು ಕೇಂದ್ರದ ದಶಮಾನೋತ್ಸವ. ಸಿರಿಧಾನ್ಯಗಳ ಕುರಿತಾದ ಬರೆಹಕ್ಕೆ ಪ್ರಥಮ ಬಹುಮಾನ ಪಡೆದ ಗುಂಗಿನಲ್ಲಿದ್ದಾಗ ಜಿಲ್ಲಾ ರಾಜ್ಯೋತ್ಸವ ಪುರಸ್ಕಾರದ ಸುದ್ದಿ.

ರಾಜ್ಯ ಮಟ್ಟದ ಪ್ರಶಸ್ತಿಗಳಿಗೆ 'ರಾಜಕೀಯ ಸರ್ಕಸ್' ನಡೆಯುತ್ತಿರುವ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಬರುತ್ತಿತ್ತು. ಪ್ರಶಸ್ತಿಯೊಂದಿಗೆ ಸಿಗುವ ಒಂದು ಲಕ್ಷದ ಲಕ್ಷ್ಯ! ಅದಕ್ಕೆ ಪ್ರಶಸ್ತಿ ಉಪಾಧಿ. ಇದಕ್ಕಾಗಿ ಎಂತೆಂತಹ ರಾಜಕೀಯ ಒತ್ತಡ, ವಶೀಲಿ, ಮಧ್ಯವರ್ತಿಗಳು... ಮತ್ತೊಂದೆಡೆ `ಸರಿಯಾಗಿ ತೂಗಿನೋಡಿಯೇ ಅರ್ಹರಿಗೆ ಪ್ರಶಸ್ತಿ ಕೊಟ್ಟಿದ್ದೇವೆ' ಎನ್ನುವ ಮುಖ್ಯಮಂತ್ರಿಗಳು. ಈ ಮಧ್ಯೆ ಕನ್ನಡಪ್ರಭದ ಸಂಪಾದಕರು ಪ್ರಶಸ್ತಿಯನ್ನು ನಿರಾಕರಿಸಿಯೇ ಬಿಟ್ಟರು.

ರಾಜಧಾನಿಯಲ್ಲಿ ಪ್ರಶಸ್ತಿ ಕುರಿತಾದ ಎದ್ದು ಕಾಣುವ ಕೊಳಕುಗಳು. ಇತ್ತ ಜಿಲ್ಲಾ ಪ್ರಶಸ್ತಿಯು ಯಾವುದೆ ಸದ್ದುಗದ್ದಲವಿಲ್ಲದೆ ಹುಡುಕಿ ಬಂದದ್ದು. ಅದೂ 'ಗ್ರಾಮೀಣ ಪತ್ರಿಕೋದ್ಯಮ' ವಿಭಾಗಕ್ಕೆ. ಪ್ರತೀ ವರ್ಷ ದಕ್ಷಿಣ ಕನ್ನಡ ಜಿಲ್ಲಾಡಳಿತವು 'ಪತ್ರಕರ್ತ ವಿಭಾಗ'ದಲ್ಲಿ ಪ್ರಶಸ್ತಿಯನ್ನು ನೀಡುತ್ತಿತ್ತು. ಈ ಸಲ ಗ್ರಾಮೀಣ ಪತ್ರಿಕೋದ್ಯಮಕ್ಕೆ ಮಣೆ. ಈ ಪ್ರಶಸ್ತಿಗೆ ನಾನೇ ಬಲಿಯಾಗಬೇಕೇ?!

ಇರಲಿ, ಕೊನೇ ಪಕ್ಷ ಬೇರೇನೂ ಸಿಗದಿದ್ದರೂ (ಕಾಫೀ ವಗೈರೆ..!) ಸರಕಾರದ ಮುದ್ರೆಯುಳ್ಳ 'ಪ್ರಶಸ್ತಿ ಪತ್ರ'ವಾದರೂ ಸಿಕ್ಕಿತಲ್ಲಾ! (ಈ ಪತ್ರವನ್ನಿಟ್ಟುಕೊಂಡು ಏನು ಮಾಡೋದು ಎಂಬುದು ಬೇರೆ ಮಾತು). ಇದೇ ರೀತಿ ಪ್ರಶಸ್ತಿಗಳು ಕನ್ನಾಡಿನಾದ್ಯಂತ ಅರ್ಹರನ್ನು ಅರಸಿಕೊಂಡು ಹೋದರೆ ಚೆನ್ನಾಗಿತ್ತಲ್ವಾ. ಆ ಖುಷಿನೇ ಬೇರೆ. ಸ್ನೇಹಿತರೊಂದಿಗೆ ಹೇಳಿಕೊಳ್ಳಲು ಮಜಾ.

ಇಂತಹ ಮಜಾ, ಖುಷಿಯನ್ನು ’ಪ್ರಶಸ್ತಿ’ಯ ಹಿನ್ನೆಲೆಯಲ್ಲಿ ಹಂಚಿಕೊಳ್ಳುತ್ತಿದ್ದೇನೆ.