Tuesday, October 19, 2010

'ಹಾರಕ' ಲೇಖನಕ್ಕೆ ಪ್ರಥಮ ಪುರಸ್ಕಾರ

ಅಡಿಕೆ ಪತ್ರಿಕೆಯ ಸಹಾಯಕ ಸಂಪಾದಕ ನಾ. ಕಾರಂತ ಪೆರಾಜೆಯವರ 'ಉಳಿಸಬೇಕಿದೆ ಈ ಕಿರುಧಾನ್ಯ - ಹಾರಕ' ಬರೆಹವು ಮಿಲ್ಲೆಟ್ ನೆಟ್ವರ್ಕ್ ಆಪ್ ಇಂಡಿಯಾ (ಮಿನಿ) ಆಯೋಜಿಸಿದ ಲೇಖನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನಕ್ಕೆ ಆಯ್ಕೆಯಾಗಿದೆ.

ಜುಲೈ 21, 2010ರಂದು ಉದಯವಾಣಿಯ ಹುಬ್ಬಳ್ಳಿ ಆವೃತ್ತಿಯಲ್ಲಿ ಈ ಬರೆಹ ಪ್ರಕಟವಾಗಿತ್ತು. ಧಾರವಾಡದ ಕೃಷಿ ಮಾಧ್ಯಮ ಕೇಂದ್ರದ ನೇತೃತ್ವದಲ್ಲಿ ಪುರಸ್ಕಾರಗಳ ಆಯ್ಕೆ ಪ್ರಕ್ರಿಯೆ ನಡೆದಿತ್ತು.

ನಮ್ಮ ಕೃಷಿರಂಗ ಎದುರಿಸುತ್ತಿರುವ ಅನೇಕ ಸಮಸ್ಯೆಗಳಿಗೆ ಸೂಕ್ತ ಪರಿಹಾರವಾಗಬಲ್ಲ; ಆಹಾರ ಮತ್ತು ಮೇವಿನ ಭದ್ರತೆ ಕಲ್ಪಿಸಬಲ್ಲ, ಅಪಾರ ಪೌಷ್ಟಿಕಾಂಶಗಳ ಆಗರವಾಗಿರುವ; ಆರೋಗ್ಯಕ್ಕೆ ಪೂರಕವಾಗಿರುವ ಸಾವಿ, ನವಣೆ, ಸಜ್ಜೆ, ಆರ್ಕ, ಉದಲು, ಕೊರ್ಲೆ, ಬರಗ ಮೊದಲಾದ ಧಾನ್ಯಗಳಿಗೆ ಒರಟು ಧಾನ್ಯಗಳೆಂಬ ಹಣೆಪಟ್ಟಿ ಕಟ್ಟಿ ಇವನ್ನು ದೇಶದ ಆಹಾರ ಧಾನ್ಯಗಳ ಅಗ್ರಪಂಕ್ತಿಯಲ್ಲಿ ಪೂರ್ಣ ಕಡೆಗಣಿಸಲಾಗಿದೆ. 'ಮಿನಿ' ಅವುಗಳನ್ನು ಮತ್ತೆ ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ. ಮಾಧ್ಯಮವೂ ಈ ಕಾರ್ಯದಲ್ಲಿ ಕೈಜೋಡಿಸಬೇಕೆನ್ನವ 'ಮಿನಿ' ಅಂತಹ ಪ್ರಯತ್ನಗಳನ್ನು ಪ್ರೋತ್ಸಾಹಿಸುತ್ತಿದೆ.

ಬಹುಮಾನವು ಐದು ಸಾವಿರ ರೂಪಾಯಿ ನಗದು ಪುರಸ್ಕಾರ ಮತ್ತು ಪ್ರಶಸ್ತಿ ಪತ್ರ ಒಳಗೊಂಡಿದೆ. ಪುರಸ್ಕಾರ ಪ್ರದಾನ ಸಮಾರಂಭವು ಅಕ್ಟೋಬರ್ 31, 2010ರಂದು ಬೆಳಿಗ್ಗೆ 10 ಗಂಟೆಗೆ ಮೂಡಿಗೆರೆ ತಾಲೂಕಿನ ದೇವವೃಂದದಲ್ಲಿ ನಡೆಯುವ ಕೃಷಿ ಮಾಧ್ಯಮ ಕೇಂದ್ರದ ದಶಮಾನ ಸಮಾರಂಭದಲ್ಲಿ ನಡೆಯಲಿದೆ.

No comments:

Post a Comment